
ಕಲಬುರಗಿ: ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ (accident) ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಭೀಕರ ಅಫಘಾತ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ. ಇಂದು ನಸುಕಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ವಾಜೀದ್, ಮೆಹಬೂಬಿ, ಪ್ರಿಯಾಂಕಾ, ಮೆಹಬೂಬ್ ಸೇರಿ ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರು ಬಾಗಲಕೋಟೆಯ ನವನಗರ ನಿವಾಸಿಗಳು. ಸ್ಥಳಕ್ಕೆ ನೆಲೋಗಿ ಠಾಣೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾಕ್ಕೆ ತೆರಳುವಾಗ ದುರಂತ ಸಂಭವಿಸಿದ್ದು, ಮಿನಿ ಬಸ್ನಲ್ಲಿದ್ದ ಒಟ್ಟು 31 ಜನರ ಪೈಕಿ ಐವರು ಸಾವನ್ನಪ್ಪಿದ್ದಾರೆ. 11 ಜನರಿಗೆ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೇವರ್ಗಿಯಲ್ಲಿ ಶಾಸಕ ಡಾ.ಅಜಯ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಿಂತಿದ್ದ ಲಾರಿಗೆ ಗುದ್ದಿ ಐವರು ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಬಹಳ ಗಂಭೀರವಾಗಿದೆ. ಅವರನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ಸಳಾಂತರಿಸಲಾಗಿದೆ. ಬಹಳ ದೊಡ್ಡ ಅನಾಹುತ ನಡೆದಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಸರ್ಕಾರದ ಜೊತೆ ತಕ್ಷಣವೇ ಮಾತನಾಡಿ ಗಾಯಳುಗಳ ಚಿಕಿತ್ಸಾ ವೆಚ್ಚ ಭರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಓರ್ವ ಗಾಯಾಳು ಮಾತನಾಡಿದ್ದು, ರಾತ್ರಿ 11 ಗಂಟೆಗೆ ನಾವು ಬಾಗಲಕೋಟೆಯಿಂದ ಹೊರಟ್ಟಿದ್ದೆವು. ಎಲ್ಲರೂ ಒಂದೇ ಫ್ಯಾಮಿಲಿಯವರಾಗಿದ್ದು, ಅದರಲ್ಲಿ ಮೂವರು ನಮ್ಮ ಸ್ನೇಹಿತರಿದ್ದರು. ಒಟ್ಟು 31 ಜನ ದರ್ಗಾ ದರ್ಶನಕ್ಕೆ ಬಂದಿದ್ದೆವು. ನಮ್ಮ ಮಿನಿ ಬಸ್ ಟೈರ್ ಪಂಚರ್ ಆಗಿದೆ. ಡ್ರೈವರ್ಗೆ ಕಂಟ್ರೋಲ್ಗೆ ಬಾರದ ಹಿನ್ನಲೆ. ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ನಸುಕಿನ ಜಾವ ಈ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿ ಏಳು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಘಟನೆ ನಿನ್ನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಳಿ ನಡೆದಿತ್ತು. SSLC ಪರೀಕ್ಷೆ ಮುಗಿಸಿ ವಾಪಸ್ ತಮ್ಮ ಗ್ರಾಮಕ್ಕೆ ತೆರಳುವಾಗ ಈ ಘಟನೆ ನಡೆದಿತ್ತು. ಲಕ್ಕುಂಡಿ ಗ್ರಾಮದಿಂದ ಕಣಗಿನಾಳ ಗ್ರಾಮಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಹೋಗುತ್ತಿದ್ದರು. ಆದರೆ ಟಂಟಂ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಏಳು ವಿಧ್ಯಾರ್ಥಿಗಳಿಗೆ ಗಾಯಗಳಾಗಿವೆ.ತಕ್ಷಣ ಗಾಯಾಳುಗಳನ್ನು ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಗದಗ ಜಿಮ್ಸ್ ಆಸ್ಪತ್ರೆಗೆ ವಿದ್ಯಾರ್ಥಿಗಳ ರವಾನೆ ಮಾಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.