ಮಹಾರಾಷ್ಟ್ರದಲ್ಲಿ RSS ಕಾರ್ಯಕರ್ತರನ್ನು ಪಿಎಗಳಾಗಿ ಮಾಡಿಲ್ವಾ?

ಕರ್ನಾಟಕ ವಿಧಾನಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ರದ್ದತಿಗೆ ವಿರೋಧ ಪಕ್ಷಗಳಿಂದ ಪ್ರತಿಭಟನೆ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಮಾತನಾಡಿ, ಶಾಸಕರ ಹಕ್ಕುಗಳನ್ನು ಕಿತ್ತುಕೊಂಡಿಲ್ಲ. ಸಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಪಕ್ಷಗಳ ಆರೋಪಗಳಿಗೆ ಸಿಎಂ ಖಂಡಿಸಿದ್ದು ಮತ್ತು ಹಣದ ದುರ್ಬಳಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.ಗ್ಯಾರಂಟಿ ಅನುಷ್ಠಾನ ಸಮಿತಿ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದ ಹಣವನ್ನು ಸಂಬಳವಾಗಿ ನೀಡುತ್ತಿದೆ ಎಂದು ಆರೋಪ ಕೇಳಿಬಂದಿದೆ. ಹೀಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ (Guarantee Committee) ರದ್ದತಿಗೆ ಒತ್ತಾಯಿಸಿ ಸದನದಲ್ಲಿ ವಿಪಕ್ಷಗಳು ಧರಣಿ ಮಾಡಿವೆ. ಇದಕ್ಕೆ ಸದನದಲ್ಲೇ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ (Siddaramaiah), ಹಣ ದುರುಪಯೋಗ ಆಗುತ್ತದೆ ಎಂಬ ಪ್ರಶ್ನೆ ಇಲ್ಲ. ನಾವು ಶಾಸಕ, ಎಂಎಲ್ಸಿಗಳ ಹಕ್ಕು ಮೊಟಕು ಮಾಡಿಲ್ಲ. ಶಾಸಕರಿಗೆ ಅಗೌರವ ಮಾಡುವ ಕೆಲಸ ಆಗಲ್ಲ. ಸ್ವತ: ನಾನೂ ಕೂಡ ಶಾಸಕ ಎಂದು ಉತ್ತರಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಆರ್ಎಸ್ಎಸ್ ಕಾರ್ಯಕರ್ತರನ್ನು ಪಿಎಗಳಾಗಿ ಮಾಡಿಲ್ವಾ? ಎಂದು ವಿಪಕ್ಷ ಬಿಜೆಪಿಗೆ ತಿರುಗೇಟು ನೀಡಿದರು.ಸದನದಲ್ಲಿ ಕುಳಿತುಕೊಂಡೇ ಉತ್ತರ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ, ನಿಮ್ಮ ಸಮಸ್ಯೆಗಳಿದ್ದರೆ ಸರಿ ಮಾಡೋಣ. ಆದರೆ ಗ್ಯಾರಂಟಿ ಸಮಿತಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಬೇಡಿ ಎನ್ನುವುದು ಸರಿ ಇಲ್ಲ ಎಂದು ಹೇಳಿದ್ದಾರೆ.ನಿಗಮಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡುತ್ತೇವೆ. ಆಗ ಹಣ ದುರುಪಯೋಗ ಆಗಲ್ವಾ? ಮಹಾರಾಷ್ಟ್ರದಲ್ಲಿ ಆರ್ಎಸ್ಎಸ್ ಕಾರ್ಯಕರ್ತರನ್ನು ಪಿಎಗಳಾಗಿ ಮಾಡಿಲ್ವಾ? ಈ ವೇಳೆ ಬಿಜೆಪಿ ಶಾಸಕರಿಂದ ವಿರೋಧ ವ್ಯಕ್ತವಾಗಿದ್ದು, ಬಸವರಾಜ ಪಾಟೀಲ್ ಸೇಡಂಗೆ ಹಣ ಕೊಟ್ಟು ನೇಮಕ ಮಾಡಿರಲಿಲ್ವಾ ನೀವು ಎಂದು ಪ್ರಶ್ನಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲು ಹೋಗಲ್ಲ. ಆದರೆ ಶಾಸಕರಿಗೆ ಅಗೌರವ ಆಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.ವಿಧಾನಸೌಧದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ಎಂ ರೇವಣ್ಣ ಮಾತನಾಡಿ, ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಜನಪರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಹಿಂದಿನಿಂದ ಕಾಂಗ್ರೆಸ್ ಮುಖ್ಯಮಂತ್ರಿಗಳು ಹಲವಾರು ಯೋಜನೆ ತಂದಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಅನ್ನಭಾಗ್ಯ ಜೊತೆಗೆ 165 ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು ಎಂದರು.ಈ ಸರ್ಕಾರ ಬರುವ ಮೊದಲು ಗ್ಯಾರಂಟಿ ಯೋಜನೆ ಅನೌನ್ಸ್ ಮಾಡಿದ್ವಿ ಅದನ್ನು ಮಾಡುತ್ತಿದ್ದೇವೆ. ಬೇರೆ ವಿಚಾರವಾಗಿ ಗುಜರಾತ್ ಮಾದರಿ ಅನ್ನುತ್ತಿದ್ದರು, ಆದರೆ ಗ್ಯಾರಂಟಿ ವಿಚಾರವಾಗಿ ಕರ್ನಾಟಕ ಮಾದರಿಯಾಗಿದೆ. ನಮ್ಮ ಕಾರ್ಯಕ್ರಮ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ನಿಟ್ಟಿನಲ್ಲಿ ಅನುಷ್ಠಾನ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಯಕ್ರಮ ಸರಿಯಾಗಿ ನಡೆಯಲಿ ಅನ್ನೋ ಕಾರಣಕ್ಕೆ ಕಮಿಟಿಗಳಿವೆ. ಹಿಂದೆ ಸಹ ಎಲ್ಲ ಯೋಜನೆಗಳಿಗೂ ಕಮಿಟಿಗಳು ಇದ್ದವು ಎಂದು ತಿಳಿಸಿದ್ದಾರೆ.ಕಾರ್ಯಕ್ರಮಗಳು ಸರಿಯಾಗಿ ನಡೆಯಲಿ ಅನ್ನೋ ಕಾರಣಕ್ಕೆ ಕಮಿಟಿ ರಚನೆ ಮಾಡುತ್ತಾರೆ. ಈ ಸಾರಿ ಮಾದರಿ ರೀತಿಯಲ್ಲಿ ಅವರ ಓಡಾಟಕ್ಕೆ ಖರ್ಚು ವೆಚ್ಚಕ್ಕಾಗಿ ನೀಡಲಾಗುತ್ತಿದೆ. ಈ ಕಾರ್ಯಕ್ರಮ ನಿಲ್ಲಿಸೋದಾದರೆ ಬಿಜೆಪಿ ಅವರು ಹೇಳಲಿ. ಇದನ್ನು ಕಾಂಗ್ರೆಸ್, ಬಿಜೆಪಿ, ದಳದವರು ಅಂತ ಸಪರೇಟ್ ಆಗಿ ಕೊಟ್ಟಿಲ್ಲ. ಎಲ್ಲಾ ವರ್ಗದ ಜನರಿಗೂ ಈ ಕಾರ್ಯಕ್ರಮ ನೀಡಲಾಗಿದೆ. ಕಳ್ಳನಿಗೊಂದು ಕುಂಟ ನೆಪ ಅಂತ ಇದು ಸರಿ ಅಲ್ಲ. ಚರ್ಚೆ ಆಗಲಿ ಜನ ತಿರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.