
ಬೆಂಗಳೂರು: ಲೋಕಸಭೆ ಕ್ಷೇತ್ರ ಮರುವಿಂಗಡನೆ ವಿವಾದದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ಗೆ ಪತ್ರವನ್ನು ಬರೆದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸ್ಟಾಲಿನ್ ಸೂಚನೆಯಂತೆ ತಮಿಳುನಾಡಿನ ಸಚಿವರು ಹಾಗೂ ಸಂಸದರೊಬ್ಬರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಮಾರ್ಚ್ 22ಕ್ಕೆ ಕ್ಷೇತ್ರ ಪುನರ್ ವಿಂಗಡನೆ ವಿರೋಧಿ ಸಭೆ
ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರ ಮರುವಿಂಗಡನೆ ಸಂಬಂಧಿಸಿದಂತೆ ಮಾರ್ಚ್ 22 ರಂದು ದಕ್ಷಿಣದ ರಾಜ್ಯಗಳ ಸಭೆ ನಡೆಯಲಿದೆ. ಚೆನೈನಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಭೆಗೆ ಆಹ್ವಾನ ನೀಡಲು ತಮಿಳುನಾಡಿನ ಸಚಿವ ಮತ್ತು ಸಂಸದರು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದರು.ಆದರೆ ಈ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸಭೆಗೆ ತನ್ನ ಬದಲಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಸಿಎಂಗೆ ಬರೆದ ಪತ್ರದಲ್ಲಿ ಏನಿದೆ?
ಕ್ಷೇತ್ರ ಮರುವಿಂಗಡನೆ ಕುರಿತಾಗಿನೀವು ಬರೆದ ಪತ್ರ ಮತ್ತು ಆಹ್ವಾನವನ್ನು ಸ್ವೀಕರಿಸಿದ್ದೇನೆ. ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಷನ್ ಕುರಿತು ದಕ್ಷಿಣ ರಾಜ್ಯಗಳ ಕಾಳಜಿ ಅರಿವಿದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಸಾಧಕ ಬಾದಕಗಳ ಬಗ್ಗೆ ಅರಿವಿದೆ. ಈ ವಿಚಾರವಾಗಿ ಸುಧೀರ್ಘವಾಗಿ ಚರ್ಚಿಸುವ ಅಗತ್ಯವಿದೆ ಎಂದಿದ್ದಾರೆ.ಸಮಾನ ಮನಸ್ಕ, ಸಂತ್ರಸ್ಥರಾಗುವ ರಾಜ್ಯಗಳ ಚರ್ಚಿಸಬೇಕು.ಈ ಸಭೆಯಲ್ಲಿ ನಾನು ಭಾಗವಹಿಸಬೇಕೆಂಬ ಆಸೆ ಇದೆ ಆದರೆ ಕೆಲವು ಕಾರಣಗಳಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ವಿವರ ನೀಡಿದ್ದಾರೆ. ಮಾರ್ಚ್ 22 ರಂದು ಕರೆದ ಸಭೆಯಲ್ಲಿ ನನ್ನ ಬದಲಾಗಿ ಡಿ.ಕೆ.ಶಿವಕುಮಾರ್ ಭಾಗವಹಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡನೆಗೆ ದಕ್ಷಿಣ ಭಾರತದ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣದಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಮಾರ್ಚ್ 22 ರಂದು ಚೆನ್ನೈನಲ್ಲಿ ಕ್ಷೇತ್ರ ಪುನರ್ ವಿಂಗಡನೆ ವಿರೋಧಿ ಮಹತ್ವದ ಸಭೆ ನಡೆಯಲಿದೆ.
“ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ನಮ್ಮ ಮೈತ್ರಿ ಪಕ್ಷ ಕೂಡ ಆಗಿದ್ದು, ಈ ವಿಚಾರವಾಗಿ ಅವರ ನಿಲುವು ಬಗ್ಗೆ ನಮಗೆ ಸಮಾಧಾನವಿದೆ. ಆದರೂ ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಹಿನ್ನೆಲೆಯಲ್ಲಿ, ನಮ್ಮ ಪಕ್ಷದ ವರಿಷ್ಠರ ಜತೆ ಚರ್ಚೆ ಮಾಡಬೇಕು. ಅವರ ಮಾರ್ಗದರ್ಶನ ಪಡೆದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ. ತಮಿಳುನಾಡಿನ ಸಚಿವರು ಇಂದು ಭಾಷಾ ವಿಚಾರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ನಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ನಾವು ನಮ್ಮ ಗೌರವ ಹಾಗೂ ಸ್ವಾಭಿಮಾನ ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ” ಎಂದರು.