
ಚಿಕ್ಕಬಳ್ಳಾಪುರ, ಮಾರ್ಚ್ 19: ಜಿಲ್ಲೆಯಲ್ಲಿನ ಸ್ಕಂದಗಿರಿ (Skandagiri) ಚಾರಣಪ್ರಿಯರ ನೆಚ್ಚಿನ ತಾಣವಾಗಿದೆ. ರಾಜಧಾನಿ ಬೆಂಗಳೂರಿನಿಂದ (Bengaluru) 62 ಕಿಮೀ ಮತ್ತು ಚಿಕ್ಕಬಳ್ಳಾಪುರದಿಂದ (Chikkaballapur) 3 ಕಿಮೀ ದೂರದಲ್ಲಿದೆ. ಇಲ್ಲಿಗೆ ಬರುವ ಚಾರಣಿಗರಿಗೆ ಮಾರ್ಗದರ್ಶನ ನೀಡಲು ಅರಣ್ಯ ಇಲಾಖೆ ಚಾರಣ ಮಾರ್ಗದರ್ಶಕರ ನೇಮಕ ಮಾಡಿಕೊಂಡಿದೆ. ಆದರೆ, ಚಾರಣ ಮಾರ್ಗದರ್ಶಕರಿಗೆ ಕಳೆದ ಆರು ತಿಂಗಳುಗಳಿಂದ ವೇತನ ಜೊತೆಗೆ ಸೌಕರ್ಯಗಳನ್ನೂ ಸಹ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.ಒಂದು ಚಾರಣಕ್ಕೆ ಮಾರ್ಗದರ್ಶಕರಿಗೆ ಇಲಾಖೆಯಿಂದ ತಲಾ 800ರೂಪಾಯಿ ಸಂಬಾವನೆ ನೀಡಲಾಗುತ್ತಿತ್ತು. ಆದರೆ, ಅರಣ್ಯ ಇಲಾಖೆ ಕಳೆದ ಆರು ತಿಂಗಳುಗಳಿಂದ ಚಾರಣ ಮಾರ್ಗದರ್ಶಕರಿಗೆ ಸಂಭಾವನೆ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಇಲಾಖೆಯ ವಿರುದ್ಧ ಚಾರಣ ಮಾರ್ಗದರ್ಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೊದಲು ಕರ್ನಾಟಕ ಅರಣ್ಯ ಪ್ರವಾಸೋದ್ಯಮ ನಿಗಮ ಟ್ರೆಕ್ಕಿಂಗ್ ನಿರ್ವಹಣೆ ಮಾಡ್ತಿತ್ತು. ಆಗ ಚಾರಣ ಮಾರ್ಗದರ್ಶಕರಿಗೆ ಪ್ರತಿ ತಿಂಗಳು ಸಂಬಾವನೆ ನೀಡಲಾಗ್ತಿತ್ತು. ಆದರೆ, ಇದೀಗ ಅರಣ್ಯ ಇಲಾಖೆ ಚಾರಣ ನಿರ್ವಾಹಣೆ ಮಾಡುತ್ತಿದ್ದು, ಕಳೆದ ಆರು ತಿಂಗಳಿನಿಂದ ನಮಗೆ ಸಂಭಾವನೆ ನೀಡಿಲ್ಲ ಎಂದು ಚಾರಣ ಮಾರ್ಗದರ್ಶಕರು ಆರೋಪಿಸಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಡಿಎಫ್ಒ ಮಾತನಾಡಿ, ಒಂದು ವಾರದಲ್ಲಿ ಸಂಭಾವನೆ ನೀಡುವುದಾಗಿ ತಿಳಿಸಿದ್ದಾರೆ.
ಕಳವರದುರ್ಗ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಸ್ಕಂದಗಿರಿಯು ಕೋಟೆಯಿಂದಾವೃತ್ತವಾದ ಬೆಟ್ಟವಾಗಿದ್ದು, ಬೆಂಗಳೂರಿನಿಂದ ಸು. 62 ಕಿ.ಮೀ. ದೂರದಲ್ಲಿರುವ ಕಳವರ ಹಳ್ಲಿಯಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಳ್ಳಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7 ರ ಬಳಿ ಇದೆ. ಬೆಟ್ಟದ ತುದಿಯು ಸಮುದ್ರ ಮಟ್ಟದಿಂದ 1450 ಮೀ. ನಷ್ಟು ಎತ್ತರದಲ್ಲಿದೆ. ಒಟ್ಟು ಅಂದಾಜು 5 ಗಂಟೆಗಳ ಚಾರಣವಾಗಿದ್ದು (ಆರೋಹಣ – 2 ತಾಸು, ವಿರಾಮ – 1 ತಾಸು, ಅವರೋಹಣ – 2 ತಾಸು) ಅತೀಸುಲಭವೂ ಅಲ್ಲದ ಅತೀ ಕಠಿಣವೂ ಅಲ್ಲದ ಚಾರಣ ಮಾರ್ಗ ಇದೆ. ವರ್ಷದ ಎಲ್ಲ ಸಮಯದಲ್ಲೂ ಚಾರಣ ಮಾಡಬಹುದಾಗಿದೆ.