ರಸ್ತೆಯೊಳಗೆ ಗುಂಡಿಯೋ, ಗುಂಡಿಯೊಳಗೆ ರಸ್ತೆಯೋ? ಬ್ರ್ಯಾಂಡ್ ಬೆಂಗಳೂರ ರಸ್ತೆಯಲ್ಲಿ ಮನುಷ್ಯನ ಹೂಳುವಷ್ಟು ದೊಡ್ಡ ಗುಂಡಿ!

ಬೆಂಗಳೂರು, ಅ.16: ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸಮರ ಸಾರಿದ್ರು. ಗಡುವು ನೀಡಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದರು. ಗಡುವು ಮುಗಿದ ನಂತರ ತಡರಾತ್ರಿಯೇ ನಗರದ ಹಲವು ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಷ್ಟೆಲ್ಲಾ ಮಾಡಿದರು ನಿನ್ನೆ, ಮೊನ್ನೆಯಿಂದ ಸುರಿದ ಮಳೆಗೆ ಇಡೀ ಬೆಂಗಳೂರಿಗೆ ಜಲ ದಿಗ್ಬಂಧನವಾಗಿದೆ. ಅಲ್ಲಲ್ಲಿ ರಸ್ತೆ ಗುಂಡಿಗಳು ಬಿದ್ದಿದ್ದು ಕಳಪೆ ಕಾಮಗಾರಿಯನ್ನು ಎತ್ತಿ ತೋರಿಸುತ್ತಿದೆ.
ರಸ್ತೆಯೊಳಗೆ ಗುಂಡಿಯೋ? ಗುಂಡಿಯೊಳಗೆ ರಸ್ತೆಯೋ?
ಬೆಂಗಳೂರಿನ ಶಾಂತಿನಗರದ ಪ್ರಮುಖ ರಸ್ತೆಯಲ್ಲಿ ಮನುಷ್ಯನನ್ನೇ ಹೂಳುವಷ್ಟು ದೊಡ್ಡದಾಯಿ ರಸ್ತೆ ಬಾಯ್ತೆರೆದಿದೆ. ಮಳೆಯಿಂದ ಇಡೀ ರಸ್ತೆ ಅದ್ವಾನವಾಗಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಬಿಬಿಎಂಪಿಯ ನಿಜವಾದ ಬಣ್ಣ ಬಯಲಾಗಿದೆ. ಎರಡು ವಾರಗಳ ಹಿಂದೆಯಷ್ಟೇ ಬಿಬಿಎಂಪಿ ಇಲ್ಲಿ ಗುಂಡಿ ಮುಚ್ಚಿತ್ತು. ಆದರೆ ಈಗ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಅದರಲ್ಲೂ ಒಬ್ಬ ಮನುಷ್ಯನನ್ನು ಹೂಳುವಷ್ಟು ದೊಡ್ಡದಾಗಿ ಗುಂಡಿಬಿದ್ದಿದೆ. ಇದರಿಂದ ಕೋಪಗೊಂಡ ವಾಹನ ಸವಾರರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕಳೆಪೆ ಡಾಂಬರು ಬಳಸಿ ಕಾಮಗಾರಿ ನಡೆಸಿದರ ವಿರುದ್ಧ ಜನರು ಹಿಡಿಶಾಪ ಹಾಕಿದ್ದಾರೆ. ಡಾಂಬರೀಕರಣಕ್ಕೆ ಬಳಸಿದ್ದ ಜಲ್ಲಿಕಲ್ಲು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗುಂಡಿ ಮುಕ್ತ ನಗರ, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ವಿರುದ್ಧ ವಾಹನ ಸವಾರರು ಸಿಡಿಮಿಡಿ ಎನ್ನುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಈ ರಸ್ತೆಯಲ್ಲಿ ಓಡಾಡಲು ಹೇಳಿ. ಡಿಸಿಎಂ ಡಿಕೆ ಶಿವಕುಮಾರ್ ಕರ್ಕೊಂಡು ಬನ್ನಿ. ಈ ರಸ್ತೆಯಲ್ಲಿ ಕೂರಿಸಿ ಎಂದು ಸರ್ಕಾರದ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.