ಗೃಹಲಕ್ಷ್ಮಿ ಹಣ ಶಾಲೆಗೆ ಕುಡಿಯುವ ನೀರಿನ ಘಟಕಕ್ಕಾಗಿ ದಾನ ಮಾಡಿದ ಆಶಾ ಕಾರ್ಯಕರ್ತೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಮನೆಯ ಒಡತಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೈ ಸೇರುತ್ತಿದೆ. ಈ ಹಣವನ್ನು ಹಲವರು ಹಲವು ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮಿ ಹಣದಿಂದ ಪ್ರಿಜ್ಡ್ ಕೊಂಡುಕೊಂಡದ್ದು, ಊರ ಮಂದಿ ಹೋಳಿಗೆ ಊಟ ಹಾಕಿಸಿದ್ದು, ಅತ್ತೆ ಸೊಸೆ ಪ್ರಾವೀಜನ್ ಸ್ಟೋರ್ ಆರಂಭಿಸಿದ್ದು ಕೇಳಿದ್ದೇವೆ. ಅದರೆ ಇಲ್ಲೊಬ್ಬ ಮಹಿಳೆ ಹಲವರಿಗೆ ಮಾದರಿಯಾಗಿದ್ದಾರೆ.
ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು, ಶಾಲೆಯ ಅಭಿವೃದ್ಧಿಗಾಗಿ ಗೃಹಲಕ್ಷ್ಮಿ ಹಣ ನೀಡುತ್ತಿರುವ ಮಹಿಳೆ! ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡುಬಂದ ಚಿತ್ರಣ. ಐರಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರೆ ಆಶಾ ಕಾರ್ಯಕರ್ತೆ ಗಂಗಮ್ಮ ಬಡಿಗೇರ್ ಗೃಹಲಕ್ಷ್ಮೀ ಹಣವನ್ನ ಕೂಡಿಯಿಟ್ಟು ಶಾಲೆಗೆ ದಾನ ಮಾಡಿದ್ದಾರೆ.
ಗಂಗಮ್ಮ ದಂಪತಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗೆ ಸಮಸ್ಯೆ ಇರುವುದನ್ನು ನೋಡಿದರು. ಆಗ ದಂಪತಿ ಮಾತನಾಡಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್, ಅಥವಾ ಕುಡಿಯುವ ನೀರಿನ ಘಟಕ ಮಾಡಲು ಕೂಡಿ ಇಟ್ಟ ಹಣವನ್ನು ದಾನ ಮಾಡಿದ್ದಾರೆ. ಎಲ್ಲಾ ಮಕ್ಕಳಿಗೆ ಅನುಕೂಲ ಆಗಬೇಕು ಎಂದು ಎಂಬ ಉದ್ದೇಶದಿಂದ ಗೃಹಲಕ್ಷ್ಮೀ ಹಣ ದಾನ ಮಾಡಿದ್ದಾರೆ.
ಗಂಗಮ್ಮ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಗೃಹಲಕ್ಷ್ಮೀ ಯೋಜನೆಯಿಂದ ದೊರೆತ 12 ತಿಂಗಳ ಹಣವನ್ನು ಕೂಡಿಟ್ಟು ಶಾಲೆಗೆ ದಾನ ಮಾಡಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಈ ಹಣವನ್ನು ಶಾಲೆಗೆ ನೀಡಿದ್ದಾರೆ. ಗಂಗಮ್ಮ ನೀಡಿದ ಹಣವನ್ನು ಶಾಲೆಯ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಅಥವಾ ಕುಡಿಯುವ ನೀರಿನ ಘಟಕ ತೆಗೆದುಕೊಂಡು ಸದುಪಯೋಗ ಮಾಡಿಕೊಳ್ಳುತ್ತೇವೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.ಒಟ್ಟಿನಲ್ಲಿ ಗೃಹಲಕ್ಷ್ಮೀ ಹಣದಿಂದ ಪ್ರಿಜ್ಡ್, ಟಿವಿ ಹಾಗೂ ಸ್ಮಾರ್ಟ್ ಪೋನ್ ತೆಗೆದುಕೊಂಡಿದ್ದನ್ನು ನೋಡಿದ್ದೇವೆ. ಆಶಾ ಕಾರ್ಯಕರ್ತೆ ಶಾಲೆಯ ಅಭಿವೃದ್ಧಿ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.